ಕೂಡಲೇ ಗಾಯಾಳುಗಳನ್ನ ವಿಚಾರಿಸದೆ ಹಲ್ವಾ ತಿನ್ನುತ್ತಿದ್ದ ಮುಖ್ಯಮಂತ್ರಿ

ಬೆಂಗಳೂರು: ವಿಧಾನಸೌಧದಲ್ಲಿ ಆರ್ಸಿಬಿ ಆಟಗಾರರನ್ನು ಸಮ್ಮಾನಿಸಿ ಕಾರ್ಯಕ್ರಮ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲ್ತುಳಿತದಿಂದ ಆಸ್ಪತ್ರೆ ಸೇರಿದ್ದ ಗಾಯಾಳುಗಳನ್ನು ವಿಚಾರಿಸಲು ಯಾಕೆ ಧಾವಿಸಲಿಲ್ಲ? ನನಗಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿಗಳು ದೋಸೆ, ಬಾದಾಮಿ ಹಲ್ವ ತಿನ್ನಲು ಜನಾರ್ದನ ಹೊಟೇಲ್ಗೆ ಹೋಗಿದ್ದರು. ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟೆಲ್ಲ ಅವಘಡ ಸಂಭವಿಸಿದ ಮೇಲೂ ಸಿಎಂ ಹೊಟೇಲ್ಗೆ ಹೋಗುತ್ತಾರೆಂದರೆ ಏನರ್ಥ? ವಿಧಾನಸೌಧದ ಬಳಿ ನಡೆದದ್ದು ಸರಕಾರಿ ಕಾರ್ಯಕ್ರಮ ಆಗಿದ್ದರೆ ವಿಪಕ್ಷದವರಿಗೂ ಆಹ್ವಾನ ಇರಬೇಕಿತ್ತಲ್ಲವೇ? ಇತ್ತೀಚೆಗೆ ವಿಧಾನಸೌಧವನ್ನು ಈ ಸರಕಾರ ಡಬ್ಬಾ ಅಂಗಡಿ ಮಾಡಿಕೊಂಡಿದೆ. ಇದೇನು ಅಂತಾರಾಷ್ಟ್ರೀಯ ಪಂದ್ಯವಾಗಿರಲಿಲ್ಲ. ಸರಕಾರ ಆರ್ಸಿಬಿಯ ಫ್ರಾಂಚೈಸಿ ತೆಗೆದುಕೊಂಡಿರಲಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ತಂಡಕ್ಕೆ ವಿಶೇಷ ವಿಮಾನ ಕಾದಿರಿಸಿ ಎಚ್ಎಎಲ್ಗೆ ಕರೆಯಿಸಿಕೊಂಡವರು ಯಾರು ಎಂದು ಪ್ರಶ್ನಿಸಿದರು.
