ರಾಜ್ಯ ಸುದ್ದಿ

ಕಾಲ್ತುಳಿತ ದುರಂತ: ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆರ್.ಅಶೋಕ್ ಆಗ್ರಹ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಸುತ್ತಮುತ್ತ ನಡೆದ ಕಾಲ್ತುಳಿತದ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಕಾರಣ. ಈ ಕುರಿತು ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದ ಎಸ್‌ಐಟಿಯಿಂದ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ತನಿಖೆಗೆ ನಾವು ಒಪ್ಪುವುದಿಲ್ಲ. ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರ ಬಳಿಗೆ ಪಿಐಎಲ್‌ ಹೋಗುತ್ತಿದೆ. ಹೈಕೋರ್ಟ್‌ ನ್ಯಾಯಾಧೀಶರ ಸುಪರ್ದಿಯಲ್ಲೇ ಇದರ ತನಿಖೆ ನಡೆಯಬೇಕಿದೆ. ಇದಕ್ಕಾಗಿ ಎಸ್‌ಐಟಿ ರಚಿಸಬೇಕು. ಇದರ ವರದಿ ನೇರವಾಗಿ ಹೈಕೋರ್ಟ್‌ಗೆ ಸಲ್ಲಿಕೆಯಾಗಬೇಕು. ಈ ಎಲ್ಲ ಸಾವುಗಳಿಗೆ ನ್ಯಾಯ ನೀಡಬೇಕು. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು.

ಇದು ಕ್ರಿಕೆಟ್‌ ಅಸೋಸಿಯೇಶನ್‌ ಕಾರ್ಯಕ್ರಮ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಮರೆತಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಹಾಕಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನೋಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರ ಕೈ ಕೆಳಗೆ ಕೆಲಸ ಮಾಡುವ, ಅವರಿಗೆ ವರದಿ ಮಾಡಿಕೊಳ್ಳುವ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಏನು ಗುಡ್ಡೆ ಹಾಕುತ್ತಾರೆ? ಕಾರ್ಯಕ್ರಮದ ಬಗ್ಗೆ ಯೋಚನೆ ಮಾಡಿ, ಅದರ ರೂಪರೇಷೆ ನಿರ್ಧರಿಸಿ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಸರ್ಕಾರದ ಲೋಪದೋಷ, ಎಡವಟ್ಟುಗಳ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿ ವರದಿ ನೀಡುತ್ತಾರೆ ಅಂದರೆ ಅದನ್ನು ನಂಬಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ವಂಚನೆ ಮಾಡಿ ಹೆಣಗಳನ್ನು ಉರುಳಿಸಿದ್ದಾಯ್ತು. ಈಗ ಇವರಿಗೆ ಇವರೇ ಆತ್ಮ ವಂಚನೆ ಮಾಡಿಕೊಂಡು ಇನ್ನೊಂದು ಪಾಪ ಯಾಕೆ ಕಟ್ಟಿಕೊಳ್ಳುತ್ತಿದ್ದಾರೆ? ನ್ಯಾಯಾಂಗ ತನಿಖೆಯಿಂದ ಮಾತ್ರ ಅಮಾಯಕ ಜೀವಗಳಿಗೆ, ಅವರ ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ಕಾಂಗ್ರೆಸ್‌ನವರು ಸಣ್ಣತನ ಪ್ರದರ್ಶನ ಮಾಡುವ ದುಸ್ಸಾಹಸ ಮಾಡಬಾರದು ಎಂದರು.

ಯಶಸ್ಸಿನ ದುರ್ಲಾಭ ಪಡೆಯಲು ಯತ್ನ

ಕಪ್ಪು ನಮ್ದೇ ಎಂದು ಎಲ್ಲರೂ ಹೇಳುತ್ತಿರುವಾಗ, ತಪ್ಪು ಯಾರದ್ದು ಎಂದು ಸರ್ಕಾರವನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡವಾಗಿದೆ. ಮತ್ತೊಬ್ಬರ ಯಶಸ್ಸಿನ ದುರ್ಲಾಭವನ್ನು ಪಡೆಯಲು ಕಾಂಗ್ರೆಸ್‌ ನಾಯಕರು ಮಾಡಿದ ತಪ್ಪಿನಿಂದಾಗಿ ಈ ಅನಾಹುತ ನಡೆದಿದೆ. ಇವರ ಕೆಟ್ಟ ತೀರ್ಮಾನದಿಂದ ಇಂಜಿನಿಯರ್‌, ಡಾಕ್ಟರ್‌, ಮಕ್ಕಳು ಸತ್ತಿದ್ದು, ಇದು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದರು.

ಕಪ್ ಎತ್ತಿ ಫೋಟೋ ತೆಗೆಸಿಕೊಂಡು ಸಂಭ್ರಮ ಪಟ್ಟವರು ನಂತರ ಸತ್ತ ಅಮಾಯಕರ ಶವಕ್ಕೆ ಹೆಗಲು ಕೊಡಲು ಬರಲಿಲ್ಲ. ವಿಮಾನ ನಿಲ್ದಾಣಕ್ಕೆ ಹೋಗಿ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟವರು ಬಳಿಕ ಸತ್ತವರ ಮನೆಗೆ ಹೋಗಿ ಕಣ್ಣೀರು ಹಾಕಲಿಲ್ಲ. ಕ್ರಿಕೆಟ್ ಆಟಗಾರರಿಗೆ ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದವರು ಸತ್ತವರ ಸಮಾಧಿಗೆ ಮಣ್ಣು ಹಾಕಲೂ ಬರಲಿಲ್ಲ. ಈ ಹೃದಯಹೀನ ಸರ್ಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲ ಎಂದರು.

ವಿಧಾನಸೌಧದಲ್ಲಿ ಒಂದು ಕಾರ್ಯಕ್ರಮ ನಡೆದ ಬಳಿಕ, ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಐಪಿಎಲ್‌ ಅಧ್ಯಕ್ಷರು ಇದಕ್ಕೆ ಸ್ಪಷ್ಟೀಕರಣ ನೀಡಿದ್ದು, ಇಲ್ಲಿನ ಕಾರ್ಯಕ್ರಮದ ಆಯೋಜನೆ ಬಗ್ಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಐಪಿಎಲ್‌ ಅಧ್ಯಕ್ಷರು ನನ್ನ ತಪ್ಪಿಲ್ಲ ಎಂದು ಹೇಳಿದ್ದಾರೆ. ಕೆಎಸ್‌ಸಿಎ ತಪ್ಪು ಕೂಡ ಇಲ್ಲಿ ಕಾಣುತ್ತಿಲ್ಲ. ಹಾಗಾದರೆ ಆರ್‌ಸಿಬಿ ತಂಡವನ್ನು ವಿಧಾನಸೌಧಕ್ಕೆ ತಂದಿದ್ದು ಯಾರು ಎಂದು ಸರ್ಕಾರ ಉತ್ತರ ನೀಡಬೇಕಿದೆ ಎಂದರು.

ಪೊಲೀಸರನ್ನು ನಿಯೋಜಿಸಿದ್ದೇಕೆ?

ಪಂದ್ಯ ಮುಗಿದ ಬಳಿಕ ಪೊಲೀಸರು ಎಲ್ಲ ಕಡೆ ಅಭಿಮಾನಿಗಳನ್ನು ನಿಯಂತ್ರಿಸಿದ್ದಾರೆ. ಪೊಲೀಸರು ಕೆಲಸ ಮುಗಿಸುವಾಗ ಮಧ್ಯರಾತ್ರಿ ಕಳೆದಿತ್ತು. ಅದೇ ಪೊಲೀಸರನ್ನು ಮರುದಿನವೇ ಕರ್ತವ್ಯಕ್ಕೆ ಮತ್ತೆ ನಿಯೋಜಿಸಲಾಗಿದೆ. ಪೊಲೀಸರು ಮರುದಿನ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ನಿರಾಕರಿಸಿದ್ದರು. ಆಗ ಸರ್ಕಾರದಲ್ಲಿರುವವರು ಒತ್ತಾಯಪೂರ್ವಕವಾಗಿ ಸೂಚನೆ ನೀಡಿದ್ದರು. ಹೈಕೋರ್ಟ್‌ ಇರುವುದರಿಂದ ಇದು ನಿರ್ಬಂಧಿತ ಪ್ರದೇಶವಾಗಿದೆ. ಜನರು ಕೋರ್ಟ್‌ ಮೇಲೆ ಕೂಡ ಹತ್ತಿ ನಿಂತಿದ್ದರು. ಇಂತಹ ಕಡೆ ಕಾರ್ಯಕ್ರಮ ನಡೆಸುವಷ್ಟು ಮುಠ್ಠಾಳತನವನ್ನು ಸರ್ಕಾರ ತೋರಿದೆ. ಇಷ್ಟಾದರೂ, ಇಷ್ಟು ಜನರು ಸೇರುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇವರಿಗೆ ಸ್ವಲ್ಪವೂ ಕಾಮನ್‌ಸೆನ್ಸ್‌ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಪ್ಪು ನಮ್ಮದಲ್ಲ ಎಂದು ಹೇಳಲು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಪೊಲೀಸ್‌ ಇಲಾಖೆಗೆ ಯಾರು ಕಾರ್ಯಕ್ರಮ ನಡೆಸುತ್ತಿದ್ದಾರೆ, ಎಲ್ಲಿಂದ ಜನರನ್ನು ಬಿಡಬೇಕು, ಎಲ್ಲಿ ಬ್ಯಾರಿಕೇಡ್‌ ಹಾಕಬೇಕೆಂಬುದೇ ಗೊತ್ತಿರಲಿಲ್ಲ. ಸಣ್ಣ ಕಾರ್ಯಕ್ರಮ ಮಾಡಿದಾಗಲೇ ಆಂಬ್ಯುಲೆನ್ಸ್‌, ವೈದ್ಯರನ್ನು ಇರಿಸುತ್ತೇವೆ. ಆದರೆ ಇಷ್ಟು ಜನರು ಬಂದಾಗ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನೀಡಬೇಕಿತ್ತು ಎಂದರು.

ಮಧ್ಯಾಹ್ನ 3.45 ಕ್ಕೆ ಪೂರ್ಣಚಂದ್ರ ಎಂಬ ವ್ಯಕ್ತಿ ಸತ್ತಿದ್ದರು. 4.38 ಕ್ಕೆ ದಿವ್ಯ ಎಂಬ ಹುಡುಗಿ ಸತ್ತಿದ್ದಾಳೆ. 4.41 ಕ್ಕೆ ಒಬ್ಬ ವ್ಯಕ್ತಿ ಸತ್ತಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಮೊದಲೇ ಜನರು ಕಾಲ್ತುಳಿತಕ್ಕೊಳಗಾಗಿ ತೀರಿಹೋಗಿದ್ದಾರೆ. ಎಲ್ಲ ಸಚಿವರು ಹಾಗೂ ಅವರ ಕುಟುಂಬದವರು ಕ್ರಿಕೆಟಿಗರೊಂದಿಗೆ ಫೋಟೋ ತೆಗೆಸಿಕೊಳ್ಳುವಲ್ಲಿ ನಿರತರಾಗಿದ್ದರು. ಸಚಿವರ ಫೋಟೋ ಶೂಟ್‌ಗಾಗಿ ಅಮಾಯಕ ಯುವಜನರನ್ನು ಬಲಿ ತೆಗೆದುಕೊಳ್ಳಲಾಗಿದೆ. ಜನರು ಸತ್ತ ಸುದ್ದಿ ಗೊತ್ತಾದ ಕೂಡಲೇ ಕಾರ್ಯಕ್ರಮವನ್ನು ಕೂಡಲೇ ರದ್ದು ಮಾಡಬೇಕಿತ್ತು ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!