
ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಆರೋಗ್ಯವಾಗಿದ್ದಾರೆ ಆತಂಕ ಬೇಡ .! ಶರಣೇಗೌಡ ಮಾಲಿಪಾಟೀಲ್ ಬ್ಲಾಕ್ ಅಧ್ಯಕ್ಷರ ಸ್ಪಷ್ಟನೆ
- ಕಾರಟಗಿ : ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್ ಎಸ್ ತಂಗಡಗಿಯವರು ಎದೆನೋವಿನ ಕಾರಣದಿಂದಾಗಿ ದಿನಾಂಕ 25-03-2026ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಬ್ಲಾಕೇಜ್ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಂಡಿದ್ದು, ಒಂದು ಸ್ಟಂಟನ್ನು ಅಳವಡಿಸಿಕೊಂಡಿರುತ್ತಾರೆ.
ಕನಕಗಿರಿ ಕನಕಾಚಲಪತಿ ಆಶೀರ್ವಾದ ಹಾಗೂ ಕನಕಗಿರಿ ಕ್ಷೇತ್ರದ ಜನರ ಪ್ರಾರ್ಥನೆಯ ಕಾರಣದಿಂದ ಮಾನ್ಯ ಸಚಿವರು ಆರೋಗ್ಯವಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ಒಂದು ವಾರದ ವಿಶ್ರಾಂತಿಯನ್ನು ಪಡೆಯುವಂತೆ ವೈದ್ಯರು ತಿಳಿಸಿರುತ್ತಾರೆ. ಕ್ಷೇತ್ರದ ಬಾಂಧವರು ಈ ಕುರಿತು ಆತಂಕ ಪಡುವುದು ಸಹಜವಾಗಿದ್ದು, ಮಾನ್ಯ ಸಚಿವರು ಆರೋಗ್ಯದಿಂದಿದ್ದು, ಕ್ಷೇತ್ರದ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯವಿಲ್ಲವಿಂದು ಸಹೋದರರಾದ ಮಾನ್ಯ ಶ್ರೀ ವೆಂಕಟೇಶ ತಂಗಡಗಿಯವರು ಮಾಹಿತಿಯನ್ನು ನೀಡಿರುತ್ತಾರೆ.
ಕ್ಷೇತ್ರದ ಬಾಂಧವರು ಅವರ ಯೋಗ-ಕ್ಷೇಮ ವಿಚಾರಿಸಲು ಬೆಂಗಳೂರಿಗೆ ಆಗಮಿಸುವುದು ಅವರ ಪ್ರೀತಿಯ ದ್ಯೋತಕವಾಗಿದ್ದು, ಆದರೆ ಮಾನ್ಯ ಸಚಿವರಿಗೆ ವಿಶ್ರಾಂತಿಯ ಅತಿ ಅವಶ್ಯಕತೆಯಿರುವುದರಿಂದ ಯಾರೂ ಕೂಡ ಬೆಂಗಳೂರಿಗೆ ಆಗಮಿಸದೇ ಅವರಿಗೆ ಸಂಪೂರ್ಣ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲು ವಿನಂತಿಯನ್ನು ಮಾಡಿಕೊಂಡಿರುತ್ತಾರೆ. ಒಂದು ವಾರದ ನಂತರ ಮಾನ್ಯ ಸಚಿವರು, ಕ್ಷೇತ್ರಕ್ಕೆ ಆಗಮಿಸಲಿದ್ದು, ಇಲ್ಲಿ ತಾವುಗಳು ಯೋಗಕ್ಷೇಮ ವಿಚಾರಿಸಿರಿ ಎಂದು ಕೋರಿರುತ್ತಾರೆ.
ಪ್ರಯುಕ್ತ ಕ್ಷೇತ್ರದ ಬಾಂಧವರೆಲ್ಲರೂ ಅವರನ್ನು ಭೇಟಿಯಾಗಲೂ ಬೆಂಗಳೂರಿಗೆ ಹೋಗದೇ, ಎಂದಿನಂತೆ ಕ್ಷೇತ್ರದ ಬಾಂಧವರ ಸೇವೆಯಲ್ಲಿ ಮೊದಲಿನಂತೆ ತೊಡಗಿಕೊಳ್ಳಲು ಅನುಕೂಲವಾಗುವಂತೆ, ಮಾನ್ಯ ಸಚಿವರಿಗೆ ವಿಶ್ರಾಂತಿಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತಾ, ಮುಂದಿನ ವಾರ ಅವರನ್ನು ಕಾರಟಗಿ ಸ್ವಗೃಹದಲ್ಲಿ ಭೇಟಿಯಾಗೋಣವೆಂದು ಮಾನ್ಯ ಸಚಿವರು ಕುಟುಂಬದ ಪರವಾಗಿ ಕಾರಟಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶರಣೇಗೌಡ ಮಾಲಿಪಾಟೀಲ್ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

