Blog

ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಟಿಗೆ ಕೊಕ್. ಲೇಖಕಿಯರ ಸಂಘ ಆಕ್ರೋಶ: ಡಿಸಿಗೆ ಮನವಿ ಸಲ್ಲಿಕೆ

ಗಂಗಾವತಿ.
ಐತಿಹಾಸಿಕ ಆನೆಗೊಂದಿ ಉತ್ಸವದಲ್ಲಿ ನಡೆಯುವ ವಿಚಾರ ಸಂಕೀರ್ಣದಲ್ಲಿ ಮಹಿಳಾ ಗೋಷ್ಟಿಗೆ ಅವಕಾಶ ನೀಡದಿರುವುದು ಬೇಸರ ಮೂಡಿಸಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಗೋಷ್ಟಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭಾನುವಾರ ಆನೆಗೊಂದಿಗೆ ಆಗಮಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ|| ಮಮ್ತಾಜ್‌ಬೇಗಂ, ಖಜಾಂಚಿ ಸೋಮಕ್ಕ ಎಂ, ಸದಸ್ಯೆ ವಿಜಯಲಕ್ಷ್ಮೀ, ನಾಗರತ್ನ ಹೆಚ್ ಮತ್ತಿತರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಹಿಳೆಯರಿಗೆ ವಿಶೇಷ ಅಧ್ಯತೆ ನೀಡುವುದಾಗಿ ಶಾಸಕರು ಮತ್ತು ಅಧಿಕಾರಿಗಳು ಪದೇ ಪದೇ ಹೇಳುತ್ತಾ ಬರುತ್ತಾರೆ. ಆದರೆ ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಟಿ ನಡೆಸದೇ ಕಡೆಗಣಿಸಲಾಗಿದೆ. ಗೋಷ್ಟಿಗಳಲ್ಲಿ ವಿವಿಧ ರೀತಿಯ ಆರು ವಿಷಯಗಳ ವಿಚಾರಗಳ ಮಂಡನೆಯ ಗೋಷ್ಟಿ ಆಯೋಜಿಸಿದ್ದು, ಅಹ್ವಾನ ಪತ್ರಿಕೆಯಲ್ಲಿ ನಮಗೆ ಗೊತ್ತಾಗಿದೆ. ಆದರೆ ಎರಡು ದಿನಗಳ ಹಿಂದೆಯಷ್ಟೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗಿದೆ. ಆದರೆ ಉತ್ಸವದ ಗೋಷ್ಟಿಗಳಲ್ಲಿ ಮಹಿಳಾ ವಿಚಾರ ಗೋಷ್ಟಿ ನಡೆಸದಿರುವುದು ಸರಿಯಲ್ಲ. ಮಹಿಳೆಯರ ಸಾಮಾಜಿಕ ಸಮಸ್ಯೆ, ಶೈಕ್ಷಣಿಕ ಪ್ರಗತಿ, ಮಹಿಳಾ ಸಾಧಕಿಯರ ಕುರಿತು ಇಂತಹ ಉತ್ಸವದಲ್ಲಿ ಚರ್ಚೆಯಾಗಬೇಕು. ಇಲ್ಲದಿದ್ದರೆ ಮಹಿಳೆಯರನ್ನು ಕಡೆಗಣಿಸದಂತಾಗುತ್ತದೆ ಎಂದು ಮನವರಿಕೆ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ನಲೀನ್ ಅತುಲ್, ವಿಚಾರ ಸಂಕೀರ್ಣದಲ್ಲಿ ಮಹಿಳಾ ಗೋಷ್ಟಿಗೆ ಅವಕಾಶ ನೀಡಿಲ್ಲ ಎಂಬ ಮಾಹಿತಿ ನನ್ನ ಗಮನಕ್ಕೆ ಇಲ್ಲ. ಆದರೂ ಎರಡನೇ ವೇದಿಯಲ್ಲಿ ನಡೆಯುವ ಗೋಷ್ಟಿಗಳಲ್ಲಿ ಮಹಿಳಾ ಗೋಷ್ಟಿ ನಡೆಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರಲ್ಲದೇ ಭಾಗವಹಿಸುವ ಮಹಿಳಾ ಪ್ರಮುಖರ ಮಾಹಿತಿ ಸಹಾಯಕ ಆಯುಕ್ತರು ಮತ್ತು ಆಯೋಜಕರಿಗೆ ನೀಡಿ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ|| ಮಮ್ತಾಜ್ ಬೇಗಂ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆನೆಗೊಂದಿ ಉತ್ಸವ ಆಯೋಜಿಸಿರುವುದು ಮಹಿಳಾ ಲೇಖಕಿಯರಿಗೆ ಸಂತೋಷವಾಗಿತ್ತು. ಮತ್ತು ಮಹಿಳಾ ಗೋಷ್ಟಿಗಳು ಶಾಸಕರು ಅನುವು ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಅಹ್ವಾನ ಪತ್ರಿಕೆ ನೋಡಿದ ತಕ್ಷಣ ಮಹಿಳಾ ಗೋಷ್ಟಿಗೆ ಕೋಕ್ ಕೊಟ್ಟಿರುವ ವಿಷಯ ತಿಳಿದು ನಮಗೂ ಶಾಕ್ ಆಯಿತು. ೧೦೦ಕ್ಕೂ ಹೆಚ್ಚು ಮಹಿಳೆಯರು ಕಥೆ, ಕವನ ಮತ್ತಿತರ ಲೇಖನ ಬರೆಯುತ್ತಿದ್ದಾರೆ. ಅವರಿಗೆ ಇಂತಹ ಉತ್ಸವಗಳಲ್ಲಿ ಅವಕಾಶ ಮಾಡಿಕೊಟ್ಟರೆ ಮಹಿಳೆಯರ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು. ಆದರೆ ಆಯೋಜಕರು ಮಹಿಳೆಯರಿಗೆ ಪ್ರಾತಿನಿದ್ಯ ನೀಡುವಲ್ಲಿ ನಿರ್ಲಕ್ಷ ಮಾಡಿರುವುದು ಬೇಸರವಾಗಿತ್ತು. ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿರುವುದು ಕೊಂಚ ಸಮಾಧಾನ ತಂದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದೆ ಈ ರೀತಿ ಆಗದಂತೆ ಗಮನ ಹರಿಸಬೇಕು ಎಂದರು.
ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ, ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿ, ತಾಪಂ ಇಓ ಲಕ್ಷ್ಮೀದೇವಿ ಯಾದವ್ ಮತ್ತಿತರ ಅಧಿಕಾರಿಗಳು ಮನವಿ ಸ್ವೀಕರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!