ಮೋದಿಪರ ಜನಾರ್ಧನರೆಡ್ಡಿ ಬ್ಯಾಟಿಂಗ್.. ಬಿಜೆಪಿಗೆ ಬೆಂಬಲಿಸುವ ಸುಳಿವು

ಗಂಗಾವತಿ.
ದೇಶದಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಮೆಚ್ಚುಗೆಯಾಗುತ್ತಿದೆ. ಮತ್ತೊಮ್ಮೆ ಅವರು ಈ ದೇಶದ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ದೇಶದ ಜನರು ಬಯಸುತ್ತಿದ್ದಾರೆ. ಹೀಗಾಗಿ ನಾನು ಕೂಡಾ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ವಿಶ್ವ ಮೆಚ್ಚುವಂತೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಲ್ಲಿ ಅವರದ್ಧ ಬದ್ಧತೆಗೆ ನಾನು ಮಾರು ಹೋಗಿದ್ದೇನೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ನಾನು ಬಯಸುತ್ತಿದ್ದೇನೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಸುಳಿವು ನೀಡಿದರು.
ಶುಕ್ರವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿದರು. ಜಗದೀಶಶೆಟ್ಟರ್ ಬಿಜೆಪಿಗೆ ಹೋಗಿರುವ ಹಿನ್ನೆಲೆಯಲ್ಲಿ ತಾವು ಕೂಡಾ ಬಿಜೆಪಿಕಡೆ ಮುಖ ಮಾಡಿದ್ದೀರಿ ಎಂಬ ರೋಮರ್ ಇದೆ ಎಂಬ ಸುದ್ದಿಗಾರರ ಪ್ರಶ್ನೇಗೆ ಉತ್ತರಿಸಿದ ಜನಾರ್ಧನರೆಡ್ಡಿ ಭಾರತೀಯ ಜನತಾ ಪಕ್ಷ ನನ್ನ ರಾಜಕೀಯ ಮಾತೃಪಕ್ಷವಾಗಿದೆ. ಹೀಗಾಗಿ ಬಿಜೆಪಿಯಲ್ಲಿರುವ ಎಲ್ಲ ನಾಯಕರು ನನ್ನ ಬಗ್ಗೆ ಪ್ರೀತಿ, ಸ್ನೇಹ ಹೊಂದಿದ್ದಾರೆ. ನನಗೂ ಕೂಡಾ ವೈಯಕ್ತಿಕವಾಗಿ ಆ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧವಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಕೆಆರ್ಪಿಪಿ ಪ್ರಾರಂಭಿಸಿ ಗಂಗಾವತಿ ಶಾಸಕನಾಗಿದ್ದೇನೆ. ರಾಜ್ಯದಲ್ಲಿ ಕೆಆರ್ಪಿಪಿ ಸಂಘಟಿಸುವ ಉದ್ದೇಶ ಹೊಂದಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಕೆಆರ್ಪಿಪಿಯಿಂದ ೨೮ ಕ್ಷೇತ್ರದಲ್ಲೂ ಸ್ಪರ್ಧಿಸುವ ಶಕ್ತಿ ಇಲ್ಲ. ಕನಿಷ್ಟ ೫ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ನಿರ್ಧಾರ ಮಾಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರಿಂದ ಅಹ್ವಾನ ಬಂದರೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಆದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿಲ್ಲ. ಈಡೀ ದೇಶವೇ ಒಂದಾಗಿ ಬಿಜೆಪಿಗೆ ಬೆಂಬಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಿಸುತ್ತಿದೆ. ನಾನು ಕೂಡಾ ಅದೇ ದಾರಿಯಲ್ಲಿದ್ದು, ನರೇಂದ್ರ ಮೋದಿ ಅವರಿಗಾಗಿ ನಾನು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇದೆ ಎಂದು ತಮ್ಮ ಮುಂದಿನ ನಿರ್ಧಾರದ ಸುಳಿವನ್ನು ಹರಿಬಿಟ್ಟ ಅವರು ಗಂಗಾವತಿ ಕ್ಷೇತ್ರದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಗಂಭೀರವಾಗಿ ಆರೋಪಿಸಿ ಅನ್ಸಾರಿ ರಾಜಕೀಯ ಪ್ರಬುದ್ಧತೆ ಇಲ್ಲದ ವ್ಯಕ್ತಿ. ಪ್ರತಿಷ್ಟೆಗಾಗಿ ಅವರು ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ. ಲೋಕಸಭೆ ಚುನಾವಣೆವರೆಗೆ ಮಾತ್ರ ಅವರ ಆಟ ನಡೆಯುತ್ತದೆ. ನಂತರ ಅವರನ್ನು ಕಾಂಗ್ರೆಸ್ ನಾಯಕರೇ ಡಸ್ಟ್ಬಿನ್ಗೆ ಹಾಕಿದಂತೆ ಮೂಲೆ ಗುಂಪು ಮಾಡಲಿದ್ದಾರೆ. ಕಾದು ನೋಡಿ ಎಂದರು.