ಕಾಂಗ್ರೆಸ್ ನೂತನ ಕಚೇರಿಗೆ ಅನ್ಸಾರಿ ಪ್ರತಿಕ್ರೀಯೆ.. ಕೆಆರ್ಪಿಪಿ ಬೆಂಬಲಿಗರ ಕಚೇರಿ
ಗಂಗಾವತಿ.
ನಗರದ ಗೌಳಿ ಮಹಾದೇವಪ್ಪ ರಸ್ತೆಯಲ್ಲಿ ನೂತನವಾಗಿ ಕಾಂಗ್ರೆಸ್ ಕಚೇರಿ ಪ್ರಾರಂಭಿಸುತ್ತಿದ್ದಾರೆ. ಆದರೆ ಅಲ್ಲಿ ಇರುವವರೆಲ್ಲರೂ ಕೆಆರ್ಪಿಪಿ ಬೆಂಬಲಿಗರು ಮಾತ್ರ. ಹೆಸರಿಗೆ ಕಾಂಗ್ರೆಸ್ ಕಚೇರಿ ಎಂದು ಬೋರ್ಡ್ ಹಾಕುತ್ತಾರೆ. ನನ್ನ ಜೊತೆ ಇರುವವರು ಮಾತ್ರ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಶನಿವಾರ ರಾತ್ರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿ ಹೋದ ನಂತರ ಗಂಗಾವತಿಯಲ್ಲಿ ಕಾಂಗ್ರೆಸ್ ಕಚೇರಿ ಮಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೇಗೆ ಅವರು ಪ್ರತಿಕ್ರೀಯೆ ನೀಡಿದರು. ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದಲ್ಲಿದ್ದವರೇ ಪ್ರಮುಖ ಕಾರಣರಾಗಿದ್ದಾರೆ. ಇದು ಪಕ್ಷದ ಎಲ್ಲಾ ನಾಯಕರಿಗೆ ಗೊತ್ತಿದೆ. ಆದರೆ ಈಗ ನನ್ನಿಂದ ಹೊರ ಹೋಗಿ ತಾವೇ ನೈಜ ಕಾಂಗ್ರೆಸ್ಸಿಗರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದನ್ನು ಜನರು ನಂಬುವುದಿಲ್ಲ. ಕಾಂಗ್ರೆಸ್ ಕಚೇರಿ ಎಂದು ಹೇಳುತ್ತಾರೆ. ಆದರೆ ಅಲ್ಲಿ ಇರುವವರೆಲ್ಲರೂ ಕೆಆರ್ಪಿಪಿಗೆ ಬೆಂಬಲಿಸಿದವರು. ಕೆಲವು ಮಾಜಿಗಳು ಕೂಡಾ ಚುನಾವಣೆಯಲ್ಲಿ ಕೆಆರ್ಪಿಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಈ ಎಲ್ಲಾ ಸಂಗತಿ ನಮ್ಮ ಪಕ್ಷದ ಹೈಕಮಾಂಡ್ ಗಮನಕ್ಕೆ ಇದೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನನ್ನು ದೂರ ಇಟ್ಟು ಕೆಲವರು ಕಾರ್ಯಕ್ರಮ ಮಾಡಿದ್ದರಿಂದ ನಾನು ಇತ್ತೀಚಿಗೆ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ನನಗೆ ಎಲ್ಲಾ ಸಹಕಾರ ನೀಡಲಿದ್ದಾರೆ. ನಮ್ಮ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಾರೆ. ಕೆಲವರು ಕಾಂಗ್ರೆಸ್ ಪಕ್ಷದಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಕಚೇರಿ ತೆರೆದಿದ್ದಾರೆ. ಆದರೆ ಅವರೆಲ್ಲ ಮನಸ್ಥಿತಿ ಕೆಆರ್ಪಿಪಿ ಕಡೆ ಇದೆ. ಮುಖ್ಯಮಂತ್ರಿಗಳು ನನ್ನ ಮನೆಗೆ ಬಂದು ನನಗೆ ನೈತಿಕ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ, ನನ್ನ ಬೆಂಬಲಿಗರಿಗೆ ಇದು ಉತ್ಸಾಹ ಮೂಡಿಸಿದೆ. ನನ್ನೊಂದಿಗೆ ಇರುವ ಅಪಾರ ಕಾರ್ಯಕರ್ತರ ಶಕ್ತಿಯಿಂದ ನಾನು ಕಾಂಗ್ರೆಸ್ ಸಂಘಟಿಸುತ್ತೇನೆ. ನನ್ನ ಕೆಲಸದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ವಿಶ್ವಾಸವಿದೆ. ಹೀಗಾಗಿ ಮುಖ್ಯಮಂತ್ರಿಗಳು ನನ್ನ ಮನೆಗೆ ಬಂದು ನನ್ನೊಂದಿಗೆ ಮಾತನಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಯಮನಪ್ಪ ವಿಠಲಾಪುರ, ನೀಲಪ್ಪ ಸಣ್ಣಕ್ಕಿ, ವಿಶ್ವನಾಥ ಮಾಲೀಪಾಟೀಲ್, ರಾಮಣ್ಣ ಬಳ್ಳಾರಿ, ಜುಬೇರ್, ಸನ್ನಿಕ್ ಪಾಷಾ ಮತ್ತಿತರು ಇದ್ದರು. ಅನ್ಸಾರಿಗೆ ಎಂಎಲ್ಸಿ ಮಾಡುವಂತೆ ಮುಖ್ಯಮಂತ್ರಿಗಳನ್ನು ನೆರೆದಿದ್ದ ಕಾರ್ಯಕರ್ತರು ಅಗ್ರಹಿಸಿ ಮನವಿ ಸಲ್ಲಿಸಿದರು.