Blog

ಅನುದಾನ ಬಿಡುಗಡೆ: ಗಂಗಾವತಿ ಕ್ಷೇತ್ರ ಕಡೆಗಣನೆ ಕಾಂಗ್ರೆಸ್ ತಾರತಮ್ಯ: ಮನೋಹರಗೌಡ ಖಂಡನೆ

ಗಂಗಾವತಿ.
ಕೇವಲ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಮಾತ್ರ ತಲಾ ರೂ.೫ ಕೋಟಿ ಕೆಕೆಆರ್‌ಡಿಬಿ ಅನುದಾನ ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಖಂಡಿಸಿದ್ದಾರೆ.
ಕಲ್ಯಾಣ ಕಲ್ಯಾಣದ ಕಾಂಗ್ರೆಸ್ ಶಾಸಕರಿಗೆ ಮಾತ್ರ ಕೆಕೆಆರ್‌ಡಿಬಿಯ ರೂ.೫ ಕೋಟಿ ಅನುದಾನ ನೀಡಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಗಮನಿಸಿರುವ ಮನೋಹರಗೌಡ ಅವರು ಕಾಂಗ್ರೆಸ್ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಾ ಪಕ್ಷ ಸೇರಿ ೪೧ ಶಾಸಕರು ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗದ ಎಲ್ಲಾ ತಾಲೂಕುಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಇಂತಹ ತಾಲೂಕುಗಳ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸ್ಥಾನ ಮಾನ ನೀಡಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಸಮಾನವಾಗಿ ಕಾಣಬೇಕಾಗಿರುವುದು ಸರಕಾರದ ಆಧ್ಯ ಕರ್ತವ್ಯವಾಗಿದೆ. ಆದರೆ ಕಾಂಗ್ರೆಸ್ ಸರಕಾರ ಕೇವಲ ತಮ್ಮ ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರಕ್ಕೆ ಮಾತ್ರ ರೂ.೫ ಕೋಟಿ ಅನುದಾನ ನೀಡಿ ಇನ್ನುಳಿದ ಕ್ಷೇತ್ರಗಳಿಗೆ ಅನ್ಯಾಯ ಮಾಡಿದೆ. ಅನುದಾನ ಹಂಚಿಕೆಯಲ್ಲೂ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಕಳಕಳಿ ಹೊಂದಿದ ನಾಯಕರಾಗಿ ಬಿಂಬಿತರಾಗಿದ್ದಾರೆ. ಆದರೆ ಕೆಲವು ಅವರ ಪಕ್ಷದ ನಡೆಯದ ನಾಣ್ಯದಂತಿರುವ ಮಾಜಿಗಳ ಮಾತು ಕೇಳಿ ಅನ್ಯ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದಿರುವುದು ಸಿದ್ಧರಾಮಯ್ಯ ಅವರ ಸಣ್ಣತನ ಪ್ರದರ್ಶನವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಗಂಗಾವತಿ ಕ್ಷೇತ್ರ ಭತ್ತ ಬೆಳೆಯುವ ನಾಡಾಗಿದೆ. ಮತ್ತು ಇಲ್ಲಿ ಹನುಮಂತನ ಜನ್ಮಸ್ಥಳವಾಗಿರುವ ಅಂಜನಾದ್ರಿ ಪ್ರದೇಶವಿದೆ. ಇಂತಹ ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ಸರಕಾರ ಮತ್ತು ಮುಖ್ಯಮಂತ್ರಿಗಳು ತಾರತಮ್ಯ ಮಾಡಬಾರದು. ಆದರೆ ಗಂಗಾವತಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ನಿರ್ಲಕ್ಷ ಮಾಡಿರುವ ವರದಿ ಬಂದಿರುವುದು ಮುಖ್ಯಮಂತ್ರಿಗಳು ಅಂಜನಾದ್ರಿಗೆ ಅನ್ಯಾಯ ಮಾಡಿದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ತಕ್ಷಣ ಕಲ್ಯಾಣ ಕರ್ನಾಟಕ ಭಾಗದ ಗಂಗಾವತಿ ಕ್ಷೇತ್ರಕ್ಕೂ ಕೆಕೆಆರ್‌ಡಿಬಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ಗಂಗಾವತಿ ಕ್ಷೇತ್ರದ ಜನರು ಮತ್ತು ಅಂಜನಾದ್ರಿಯ ಹನುಮ ಭಕ್ತರು ಉಗ್ರ ಹೋರಾಟಕ್ಕಿಳಿಯುವ ಸಂದರ್ಭದ ಬರಲಿದೆ ಎಂದು ಮನೋಹರಗೌಡ ಹೇರೂರು ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!