

ಗ್ರಾಮೀಣ ಉದ್ಯೋಗ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಇಒ ಬೆಟದೇಶ್ ಮಾಳೆಕೊಪ್ಪ ಒತ್ತು
ಕುಕನೂರು, ಆ.07: ತಾಲೂಕು ಪಂಚಾಯತ್ ಕುಕನೂರಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬೆಟದೇಶ್ ಮಾಳೆಕೊಪ್ಪ ಅವರು ಇಂದು ಮಸಬಹಂಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣಕಲ್ ಗ್ರಾಮದಲ್ಲಿ ವಿ.ಬಿ.ಜಿ.ರಾಮ್ ಜಿ (VBGRAMG) ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಪ್ರತಿದಿನ ರೂ.382 ಕೂಲಿ ದೊರೆಯಲಿದ್ದು, ಗ್ರಾಮೀಣ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಿರಂತರವಾಗಿ ಕೆಲಸ ಮಾಡುವುದರಿಂದ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 125 ಮಾನವ ದಿನಗಳ ಉದ್ಯೋಗ ದೊರೆಯಲಿದ್ದು, ಗ್ರಾಮಸ್ಥರು ಗುಳೆ ಹೋಗದೆ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಪಡೆದು ಜೀವನೋಪಾಯ ನಡೆಸಬಹುದಾಗಿದೆ ಎಂದು ಹೇಳಿದರು.
ಕೆರೆ ಪುನಶ್ಚೇತನದಂತಹ ಕಾಮಗಾರಿಗಳು ನೀರಿನ ಸಂರಕ್ಷಣೆಗೂ ಹಾಗೂ ಗ್ರಾಮಾಭಿವೃದ್ಧಿಗೂ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಶರಣಪ್ಪ ಕೆಳಗಿನಮನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಬಸಪ್ಪ ಸಣ್ಣಕರಡದ್, ತಾಂತ್ರಿಕ ಸಂಯೋಜಕ ಸುರೇಶ್ ದೇಸಾಯಿ, ಐ.ಇ.ಸಿ. ಸಂಯೋಜಕ ಲಕ್ಷ್ಮಣ ಕೆರಳ್ಳಿ, ತಾಂತ್ರಿಕ ಸಹಾಯಕ ಚೇತನ್ ಹಳ್ಳಿ, ಬಿ.ಎಫ್.ಟಿ. ಸಂತೋಷ ದೊಡ್ಮನಿ, ಕಾಶಿನಾಥ, ಗ್ರಾಮ ಕಾಯಕ ಮಿತ್ರೆ ಗೀತಾ ಈಳಿಗೇರ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.
ವರದಿ: ಚನ್ನಯ್ಯ ಹಿರೇಮಠ, ಕುಕನೂರು



